ಆಯೋಗದ ಸದಸ್ಯನಾಗಿ ಇಂದು ಕೊನೆಯ ದಿನ.ಆತ್ಮೀಯರೇ ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ 19.03.2023 ರಂದು ಸರ್ಕಾರ ನನ್ನನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಿತ್ತು

ಆಯೋಗದ ಸದಸ್ಯನಾಗಿ ಇಂದು ಕೊನೆಯ ದಿನ.ಆತ್ಮೀಯರೇ ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ 19.03.2023 ರಂದು ಸರ್ಕಾರ ನನ್ನನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಿತ್ತು. ಇಂದಿಗೆ ಮೂರು ವರ್ಷ ತುಂಬಿತು. ಕಳೆದ ಮೂರು ವರ್ಷಗಳು ನನ್ನ ಜೀವನದಲ್ಲಿ ಅತ್ಯಂತ ಅರ್ಥಪೂರ್ಣವಾದ, ಕಲಿಕೆಯೂ ಸೇವೆಯೂ ಒಂದಾಗಿದ್ದ ಅಪರೂಪದ ಅಧ್ಯಾಯವಾಗಿದೆ.ರಾಜ್ಯದ ಕಿರಿಯ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿಯೊಂದು ನನ್ನ ಹೆಗಲಿಗೆ ಬಿದ್ದಿದ್ದು ನನ್ನ ಸೌಭಾಗ್ಯವೇ ಸರಿ. ಅದರಲ್ಲೂ ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯ ಸದಸ್ಯನಾಗಿ ಜವಾಬ್ದಾರಿ ಹೊತ್ತು ರಾಜ್ಯದ ಬಹುಪಾಲು ಎಲ್ಲಾ ಜಿಲ್ಲೆಗಳಿಗೆ ಪರಿಶೀಲನಾ ಬೇಟಿ, ಪ್ರಗತಿ ಪರಿಶೀಲನಾ ಸಭೆ, ದೂರುಗಳ ಸ್ವೀಕಾರ, ದೂರುಗಳ ವಿಚಾರಣೆ, ಸಂಕಷ್ಟದಲ್ಲಿನ ಸಾವಿರಾರು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಿಗೆ ನ್ಯಾಯದಾನ ವ್ಯವಸ್ಥೆಗೆ ಚುರುಕು ನೀಡಲಾಯಿತು. ಪ್ರತಿಯೊಂದು ಪ್ರಕರಣ, ಪ್ರತಿಯೊಂದು ಭೇಟಿ, ಪ್ರತಿಯೊಂದು ಸಂವಾದ ನನ್ನನ್ನು ಮತ್ತಷ್ಟು ಸಂವೇದನಾಶೀಲನನ್ನಾಗಿ ಮಾಡಿ, ಸಮಾಜದದಲ್ಲಿ ಮಕ್ಕಳು ಎದುರಿಸುತ್ತಿರುವ ನಿಜವಾದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ.ಮುಂದುವರೆದು 1. ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲೂ ಮಕ್ಕಳ ರಕ್ಷಣಾ ನೀತಿ-2016 (ಪರಿಷ್ಕರಣೆ-2023) ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು 11 ಇಲಾಖೆಗಳ ವ್ಯಾಪ್ತಿಯಿಂದ ಸುತ್ತೋಲೆ ಹೊರಡಿಸಲು ಕ್ರಮಕೈಗೊಳ್ಳಲಾಗಿದೆ. 2. ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೂ ಮಕ್ಕಳ ಸಹಯಾವಾಣಿ ಸಂಖ್ಯೆ 1098 ಅನ್ನು ಪ್ರದರ್ಶಿಸಲು ಸರ್ಕಾರಕ್ಕೆ ಪತ್ರಬರೆದು ಆದೇಶ ಮಾಡಿಸಲಾಗಿದೆ. ಸುಮಾರು 34 ಇಲಾಖೆಗಳು ಈ ಕುರಿತು ಸುತ್ತೋಲೆ ಹೊರಡಿಸಿವೆ.3. ಮಕ್ಕಳ ಅಸಹಜ ಸಾವುಗಳನ್ನು ತಪ್ಪಿಸುವ ಸಂಬಂಧ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಲಾಗಿದೆ. ಅದರಲ್ಲೂ ಶಾಲಾ ಆವರಣಗಳಲ್ಲಿ ಮಕ್ಕಳು ವಿದ್ಯುತ್ ಅವಘಡಗಳಿಂದ ಮಕ್ಕಳು ಸಾವನ್ನಪುವ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟಲಾಗಿದೆ.4. ನೀರಿನಲ್ಲಿ ಮುಳುಗಿ ಮಕ್ಕಳು ಸಾವನ್ನಪುö್ಪವ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟುವ ಸಂಬಂಧ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಲಾಗಿದೆ. ಕೃಷಿ ಹೊಂಡಗಳಿಗೆ ಪೆನ್ ಸಿಂಗ್ ಮಾಡಿಸಲು ಸುತ್ತೋಲೆ ಹೊರಡಿಸುವಂತೆ ಕ್ರಮವಹಿಸಲಾಗಿದೆ.5. ನವಜಾತ ಶಿಶುಗಳ ಹಾರೈಕೆ ಮತ್ತು ಚಿಕಿತ್ಸೆ ಬಲಪಡಿಸಲು ಆರೋಗ್ಯ ಇಲಾಖೆಯೊಡನೆ ಕಾರ್ಯನಿರ್ವಹಿಸಲಾಗಿದೆ. ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯನ್ನು ಪರಿಶೀಲನೆ ಮಾಡಿ ಭ್ರೂಣ ಹತ್ಯೆಯನ್ನು ತಡೆಯುವಲ್ಲಿ ಕ್ರಮವಹಿಸಲಾಗಿದೆ.6. ಕಾರಾಗೃಹಗಳಲ್ಲಿ ಬಂದಿತರಾಗಿರುವ ಬಂದಿಗಳ ಮಕ್ಕಳ ಯೋಗಕ್ಷೇಮ ಕಾಪಾಡುವಲ್ಲಿ ಅವರ ಸಮಗ್ರ ಸಮಿಕ್ಷೆ ನಡೆಸಿ ಅವರನ್ನು ಮಿಷನ್ ವಾತ್ಯಲ್ಯ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.7. ತಾಲ್ಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಿ ತಾಲ್ಲೂಕು ಆಡಳಿತಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.8. ತಳಮಟ್ಟದಲ್ಲಿ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಗಳನ್ನು ಬಲಪಡಿಸಲು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಲಾಗಿದೆ.9. ಶಾಲೆಯಲ್ಲಿ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಾಲೆಯಲ್ಲಿರಲಿ ಶಿಕ್ಷಣದ ಜೊತೆಗೆ ರಕ್ಷಣೆ ಎಂಬ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ.10. ಮಕ್ಕಳು ಮತ್ತು ಹದಿಹರೆಯದವರ ಕಾರ್ಮಿಕ ಪದ್ದತಿಯನ್ನು ಸಮರ್ಥವಾಗಿ ತಡೆಗಟ್ಟಲು “ಬಾಲ ಮತ್ತು ಹದಿಹರೆಯದವರ ಕಾರ್ಮಿಕ ಪದ್ದತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ-1986 ರ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.11. ಮಕ್ಕಳ ನಾಪತ್ತೆ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ.12. ರಾಜ್ಯದ ಶಾಲಾ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.13. ನಗರ ಪ್ರದೇಶದಲ್ಲಿನ ಮಕ್ಕಳ ಹಕ್ಕುಗಳ ರಕ್ಷಣೆಯ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಕಾವಲು ಸಮಿತಿಗಳನ್ನು ರಚಿಸುವುದು ಹಾಗೂ ವಾರ್ಡ್ ಮಟ್ಟದ ಮಕ್ಕಳ ಹಕ್ಕುಗಳ ಸಭೆಗಳನ್ನು ನಡೆಸಲು ನಿರ್ದೇಶನ ನೀಡುವ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.14. ಮಕ್ಕಳ ಆನ್ಲೈನ್ ಸುರಕ್ಷತೆ, ಸೆಲ್ಫೋನ್ ಮತ್ತು ಇಂಟರ್ನೆಟ್ ಅಡಿಕ್ಷನ್ ನಿಯಂತ್ರಣ, ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಮಗ್ರ ಕ್ರಮಗಳನ್ನು ಕೈಗೊಳ್ಳಲು ಐಟಿಬಿಟಿ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.15. ಕರ್ನಾಟಕದಲ್ಲಿ ಮಕ್ಕಳ / ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸಲು ಸಾರಿಗೆ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ.16. ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳ ರಕ್ಷಣೆಗೆ ಸಮಗ್ರ ಆಡಳಿತಾತ್ಮಕ, ಕಾನೂನಾತ್ಮಕ ಹಾಗೂ ಮಾನಸಿಕ ಬೆಂಬಲ ವ್ಯವಸ್ಥೆಗಳನ್ನು ಜಾರಿಗೆ ತರುವ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೂಕ್ತ ಶಿಪಾರಸ್ಸುಗಳನ್ನು ನೀಡಲಾಗಿದೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಇದಲ್ಲದೆ, ಬಾಲ್ಯ ವಿವಾಹ, ಬಾಲ ಗರ್ಭಿಣಿ, ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು ಹೀಗೆ ರಾಜ್ಯದಲ್ಲಿ ಮಕ್ಕಳನ್ನು ಬಾದಿಸುತ್ತಿರುವ ಹಲವು ಸವಾಲುಗಳಿಂದ ರಕ್ಷಣೆ ಮಾಡುವಲ್ಲಿ ಆಯೋಗ ರಚನಾತ್ಮಕವಾಗಿ ಕಾರ್ಯನಿರ್ವಹಿಸಿದೆ.ನನ್ನ ಕ್ಷೇತ್ರಬೇಟಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳ ಅವಲೋಕನದ ಅಂಶಗಳನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸುಮಾರು 32 ಪತ್ರ ಬರೆದಿದ್ದೇನೆ. ಅದನ್ನು ಆಧರಿಸಿ ಸರ್ಕಾರದ 31 ಇಲಾಖೆಗಳು 76 ಸುತ್ತೋಲೆ ಹೊರಡಿಸಿದ್ದು ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.ಮಕ್ಕಳ ಹಕ್ಕುಗಳ ರಕ್ಷಣೆ ಎಂಬುದು ಕೇವಲ ಒಂದೆರಡು ಇಲಾಖೆಯ ಜವಾಬ್ದಾರಿಯಲ್ಲ ಇಡೀ ಸರ್ಕಾರ ಹಾಗೂ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕೆಂಬ ವ್ಯಾಪಕ ಅರಿವು ಮೂಡಿಸುವಲ್ಲಿ ಮಾಡಿದ ನನ್ನ ಪ್ರಯತ್ನ ತೃಪ್ತಿ ತಂದಿದೆ. ಸಾರ್ವಜನಿಕರು, ಪತ್ರಕರ್ತರು, ಸಂತ್ರಸ್ಥರು ನೂರಾರು ದೂರುಗಳನ್ನು ಆಯೋಗದ ಗಮನಕ್ಕೆ ತಂದಿದ್ದಾರೆ, ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಆಯೋಗಕ್ಕಿರುವ ಮಿತಿಯಿಂದಾಗಿ ಇನ್ನೂ ಅನೇಕ ಪ್ರಕರಣಗಳಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ.ಈ ಹುದ್ದೆ ಕೇವಲ ಗೌರವದ ಹುದ್ದೆ. ಇದಕ್ಕೆ ಯಾವುದೇ ವೇತನವಿಲ್ಲ. ಕಿ.ಮಿಗೆ ೩ರೂ ಪ್ರಯಾಣ ಭತ್ಯೆ ಎಲ್ಲಿಯಾದರೂ ವಾಸ್ತವ್ಯ ಹೂಡಿದರೆ 500/ ರೂ ದಿನ ಭತ್ಯೆ, ಸಭೆ ಅಥವಾ ಪ್ರಕರಣಗಳ ವಿಚಾರಣೆಗೆ ಭಾಗವಹಿಸಿದರೆ 1500/ ಗೌರವಧನ ನೀಡಲಾಗುತ್ತದೆ. ಒಟ್ಟಾರೆ ಒಂದು ತಿಂಗಳಿಗೆ ಒಬ್ಬ ಆಯೋಗದ ಸದಸ್ಯನಿಗೆ ಮಾಸಿಕ 6 ರಿಂದ 7 ಸಾವಿರ ರೂ ಸಿಗಬಹುದು. ಇದಕ್ಕಾಗಿ ನಾನು ಕೈತುಂಬ ವೇತನವಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದೆ. ಈ ಮೂರು ವರ್ಷಗಳಲ್ಲಿ ನಾನು ಕಳೆದಕೊಂಡ ವೇತನ ಸುಮಾರು 26 ಲಕ್ಷ. ಇಲ್ಲಿ ಯಾವುದೇ ವೇತನ ನೀಡಲಾಗುವುದಿಲ್ಲವೆಂದು ತಿಳಿದೇ ಇಲ್ಲಿಗೆ ಬಂದಿದ್ದೆಯಾದ್ದರಿಂದ ನನಗೆ ಯಾವುದೇ ಬೇಸರವಿಲ್ಲ, ಅತೃಪ್ತಿಯಿಲ್ಲ. ಬದಲಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಈ ಜವಾಬ್ದಾರಿ ಅಗಾದವಾದ ತೃಪ್ತಿ ತಂದಿದೆ. ಇದನ್ನು ಬರೆಯುವ ಅಗತ್ಯವಿರಲಿಲ್ಲ. ಆದರೆ ಸಾಕಷ್ಟು ಜನರಿಗೆ ಈ ಹುದ್ದೆಗೆ ಲಕ್ಷಾಂತರ ಸಂಬಳ ಬರುತ್ತದೆ ಎಂಬ ಭಾವನೆ ಇದೆ. ಅದಕ್ಕಾಗಿ ಬರೆಯಬೇಕಾಯಿತು ಅಷ್ಟೆ.ನನ್ನ ಈ ಮೂರು ವರ್ಷಗಳ ಪಯಣದಲ್ಲಿ ಸಹಕರಿಸಿದ ಸಹೋದ್ಯೋಗಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಹಿತೈಷಿಗಳಿಗೆ, ನನ್ನ ಕುಟುಂಬದ ಸದಸ್ಯರಿಗೆ, ಪತ್ರಕರ್ತರಿಗೆ, ಸಾರ್ವಜನಿಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಬೆಂಬಲ, ನಂಬಿಕೆ ಮತ್ತು ಸಹಕಾರವಿಲ್ಲದೆ ಈ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಈ ಪಯಣ ನನಗೆ ದೊಡ್ಡ ಜವಾಬ್ದಾರಿಯುತ ಅನುಭವವನ್ನು ನೀಡಿದೆ.ನನ್ನ ಅಧಿಕಾರಾವಧಿ ಇಲ್ಲಿ ಮುಗಿಯುತ್ತಿದ್ದರೂ, ಮಕ್ಕಳ ಹಿತಾಸಕ್ತಿಗಾಗಿ ನನ್ನ ಬದ್ಧತೆ ಎಂದಿಗೂ ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿಯೂ ಸಮಾಜದ ಒಳಿತಿಗಾಗಿ ಸಾಧ್ಯವಾದಷ್ಟು ನನ್ನ ಕೊಡುಗೆಯನ್ನು ನೀಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಸದಾ ಹೀಗೆ ಇರಲಿ.ಈ ಮೂರು ವರ್ಷಗಳಲ್ಲಿ ನನಗೆ ಸಿಕ್ಕ ಎಲ್ಲಾ ಗೌರವ-ಸಮ್ಮಾನಗಳು, ಟೀಕೆಟಿಪ್ಪಣಿಗಳು, ವಿಮರ್ಶೆಗಳು ಹಾಗೂ ಯಶಸ್ಸುಗಳನ್ನು ಗುರುದೇವ ಸ್ವಾಮಿ ವಿವೇಕಾನಂದರ ಪಾದಕಮಲಗಳಿಗೆ ಅರ್ಪಿಸುತ್ತೇನೆ.ಮುಂದಿನ ಅವಧಿಗೆ ಆಯ್ಕೆಯಾಗುವ ತಂಡಕ್ಕೆ ಶುಭಕೋರುತ್ತೇನೆ. ಹೃತ್ಪೂರ್ವಕ ಧನ್ಯವಾದಗಳು











